
ಶಿವಮೊಗ್ಗ: ರೈತ ಸಂಘಗಳು ಶುದ್ಧವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಆತ್ಮಾವಲೋಕನದ ಅಗತ್ಯವಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.
ಇಲ್ಲಿನ ರೋಟರಿ ರಕ್ತನಿಧಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ನಾಯಕ ಎನ್.ಡಿ. ಸುಂದರೇಶ್ ಅವರ 30ನೇ ನೆನಪಿನ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಸಂಘಟನೆಯನ್ನು ಬಲಪಡಿಸಿ ಚಳವಳಿಗಳನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ. ಆದರೆ, ಇಲ್ಲಿ ಕೂಡ ಒಂದಿಷ್ಟು ಗೊಂದಲಗಳಿವೆ. ರೈತ ಸಂಘಗಳು ಒಟ್ಟಾಗಬೇಕೆಂಬುದೇ ಎಲ್ಲರ ಅಪೇಕ್ಷೆ. ಆ ನಿಟ್ಟಿನಲ್ಲಿ 10ಕ್ಕೂ ಹೆಚ್ಚು ರೈತ ಸಂಘಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಸುಂದರೇಶ್ ಅವರು ಮಿಂಚಿನಂತೆ ಇಡೀ ರಾಜ್ಯ ಸುತ್ತಿ ರೈತ ಸಂಘವನ್ನು ಬಲಿಷ್ಠವಾಗಿ ಕಟ್ಟಿದ್ದರು. ಕುಟುಂಬದ ಕೆಲಸಗಳನ್ನು ಬಿಟ್ಟು ರೈತರ ಏಳಿಗೆಗಾಗಿ ದುಡಿದಿದ್ದರು. ಅವರ ಜೊತೆಗೆ ಎಚ್.ಎಸ್. ರುದ್ರಪ್ಪ, ನಂಜುಂಡಸ್ವಾಮಿ, ಕಡಿದಾಳ್ ಶಾಮಣ್ಣ ಹಾಗೂ ನಾನೂ ಸೇರಿ ಹಲವರು ರೈತ ಸಂಘವನ್ನು ಅತ್ಯಂತ ವೇಗದಲ್ಲಿ ಬೆಳೆಸಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ತೊಡಕುಗಳಾಗಿರುವುದು ನಿಜ. ಇಂತಹ ಸಂದರ್ಭದಲ್ಲಿ ಸುಂದರೇಶ್ ಅವರನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು, ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸುಂದರೇಶ್ ಅವರ ಆದರ್ಶಗಳನ್ನು ಬೆಳೆಸೋಣ. ಪ್ರಾಮಾಣಿಕವಾಗಿ ಸಂಘಟನೆ ಕಟ್ಟೋಣ. ರೈತ ಸಂಘ ಮತ್ತೊಮ್ಮೆ ರಾಜ್ಯದಲ್ಲಿ ವಿಜೃಂಭಿಸುತ್ತದೆ ಎಂದು ರೈತ ಸಂಘದ ರಾಜ್ಯ ಖಜಾಂಚಿ ಡಾ.ಬಿ.ಎಂ. ಚಿಕ್ಕಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ. ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಶಿವಮೂರ್ತಿ, ಪದಾಧಿಕಾರಿಗಳಾದ ಇ.ಬಿ. ಜಗದೀಶ್, ಸಿ.ಚಂದ್ರಪ್ಪ, ಜಿ.ಎನ್. ಪಂಚಾಕ್ಷರಿ, ರಕ್ತನಿಧಿ ಅಧ್ಯಕ್ಷ ಮಂಜಪ್ಪ ಇದ್ದರು.