ಜಮ್ಮು ಕಾಶ್ಮೀರದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ಮತ್ತು ಭರತ್ ಅವರ ಕುಟುಂಬಗಳಿಗೆ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಉಚಿತ ಶಿಕ್ಷಣದ ಭರವಸೆ ನೀಡಿವೆ. ಬಿಜೆಪಿ ಜನರಿಂದ ಸಂಗ್ರಹಿಸಿದ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಇದರೊಂದಿಗೆ, ಮಹಾವೀರ್ ಜೈನ್ ಆಸ್ಪತ್ರೆಯು 11 ವರ್ಷಗಳ ಕಾಲ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲಿದೆ.
ಹೈಲೈಟ್ಸ್:
- ಮಂಜುನಾಥ್ ಮತ್ತು ಭರತ್ ಅವರ ಮಕ್ಕಳಿಗೆ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳು ನೆರವು.
- ಮೃತರ ಕುಟುಂಬಕ್ಕೆ ಮಹಾವೀರ್ ಜೈನ್ ಆಸ್ಪತ್ರೆಯು 11 ವರ್ಷಗಳ ಕಾಲ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲಿದೆ.
- ಬಿಜೆಪಿಯಿಂದ ಜನರಿಂದ ಸಂಗ್ರಹಿಸಿದ ತಲಾ 10 ಲಕ್ಷ ರೂಪಾಯಿ ನೆರವು.
ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ರಾವ್, ಭರತ್ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತುಕೊಟ್ಟಿವೆ. ಜತೆಗೆ ಕುಟುಂಬಕ್ಕೆ ಆರ್ಥಿಕ ಕರ್ನಾಟಕ ಬಿಜೆಪಿಯಿಂದ ಜನರಿಂದ ಸಂಗ್ರಹಿಸಿದ ತಲಾ 10 ಲಕ್ಷ ರೂಪಾಯಿ ನೆರವು ನೀಡಲಾಗಿದೆ.
ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದು, ” ಕಾಶ್ಮೀರದಲ್ಲಿಉಗ್ರರ ದಾಳಿಗೆ ಬಲಿಯಾದ ರಾಜ್ಯದ ಇಬ್ಬರು ಸಂತ್ರಸ್ತರ ಕುಟುಂಬಕ್ಕೆ ಜನರಿಂದ ಸಂಗ್ರಹಿಸಿದ ತಲಾ 10 ಲಕ್ಷದ ಒಂದು ರೂ. ಪರಿಹಾರ ನೀಡುವುದಾಗಿ ” ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,”ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಮಾನವೀಯತೆಯ ಲವಲೇಶವಾದರೂ ಇದ್ದರೆ ಉಗ್ರರ ದಾಳಿಯಿಂದ ಮೃತಪಟ್ಟ ಎರಡೂ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂ. ಪರಿಹಾರ ನೀಡುತ್ತಿತ್ತು. ಆ ಮೊತ್ತವನ್ನು ಬ್ಯಾಂಕಿನಲ್ಲಿನಿಶ್ಚಿತ ಠೇವಣಿಯಿಟ್ಟರೆ ಅದರಿಂದ ಬರುವ ಬಡ್ಡಿಯಿಂದ ಅವರ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ನಡೆಯುತ್ತಿತ್ತು. ಕೇರಳದಲ್ಲಿಆನೆ ಕಾಲ್ತುಳಿತದಿಂದ ಮೃತಪಟ್ಟವರಿಗೆ ಕರ್ನಾಟಕದ ಸಿಎಂ 15 ಲಕ್ಷ ರೂ. ಪರಿಹಾರ ನೀಡಿದ್ದರು. ಭಯೋತ್ಪಾದಕರಿಂದ ಹತ್ಯೆಗೀಡಾದ ಇಬ್ಬರ ಕುಟುಂಬದವರಿಗೆ ಕನಿಷ್ಠ 15 ಲಕ್ಷ ರೂ. ಪರಿಹಾರ ಕೊಡುವ ಯೋಗ್ಯತೆ ಸರಕಾರಕ್ಕಿಲ್ಲ. ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ನಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗದು,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರೇ 20 ಲಕ್ಷ ನೀಡಿದ್ದಾರೆ
”ಈ ಕುಟುಂಬಗಳಿಗೆ ಶಕ್ತಿ ಕೊಡುವ ಜವಾಬ್ದಾರಿ ಹಿಂದೂ ಸಮಾಜಕ್ಕಿದೆ. ಭಯೋತ್ಪಾದಕರ ಕೃತ್ಯ ಖಂಡಿಸಿ ನಡೆಸಿದ ಪಂಜಿನ ಮೆರವಣಿಗೆ ವೇಳೆ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರಕಾರ ಕೊಟ್ಟ ಪರಿಹಾರಕ್ಕಿಂತ ಒಂದು ರೂ. ಹೆಚ್ಚು ಪರಿಹಾರ ಸಂಗ್ರಹಿಸಿ ಕೊಡಬೇಕೆಂದು ಕೋರಿದ್ದೆ. ಅದರಂತೆ ಜನ ಈಗಾಗಲೇ 20 ಲಕ್ಷ ರೂ. ನೀಡಿದ್ದಾರೆ,” ಎಂದು ಹೇಳಿದರು.
ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಸಂಸ್ಥೆಗಳು
”ಆರ್.ವಿ.ವಿಶ್ವವಿದ್ಯಾಲಯವು ನನ್ನ ಮನವಿಗೆ ಸ್ಪಂದಿಸಿ ಪಲ್ಲವಿ ಮಂಜುನಾಥ್ ಅವರಿಗೆ ಪತ್ರ ಬರೆದಿದೆ. ಅವರ ಮಗನಿಗೆ ಬಿಕಾಂ, ಸ್ನಾತಕೋತ್ತರ ಪದವಿ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವಿವಿ ಭರಿಸುವುದಾಗಿ ತಿಳಿಸಿದೆ. ಭರತ್ ಭೂಷಣ್ ಅವರ 3 ವರ್ಷದ ಮಗುವಿಗೆ ಕನಕಪುರ ರಸ್ತೆಯ ಟ್ರಾನ್ಸೆಂಡ್ ಶಿಕ್ಷಣ ಸಂಸ್ಥೆಯು ಒಂದರಿಂದ 12ನೇ ತರಗತಿವರೆಗೆ ಸಿಬಿಎಸ್ಇ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಸುಜಾತಾ ಭರತ್ ಭೂಷಣ್ ಅವರಿಗೆ ಪತ್ರ ಬರೆದಿದೆ,” ಎಂದು ವಿವರಿಸಿದರು.
11 ವರ್ಷ ಉಚಿತ ಚಿಕಿತ್ಸೆ
ಈ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಮಂಜುನಾಥ್ ಕುಟುಂಬದ ಜತೆಗೆ ಮುಂದಿನ 11 ವರ್ಷ ಎರಡು ಕುಟುಂಬದವರಿಗೆ ಮಹಾವೀರ ಜೈನ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.
info : VK
