
VISL Centenary Preparation By Retired Employees : ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ 100 ವರ್ಷಗಳನ್ನು ಪೂರೈಸಿದೆ. ಇದರ ಸಂಭ್ರಮಾಚರಣೆಗೆ ಸರ್ಕಾರ ಯಾವುದೇ ಆಸಕ್ತಿ ತೋರುತ್ತಿಲ್ಲ. ಇದರಿಂದ ಬೇಸರಗೊಂಡ ನಿವೃತ್ತ ನೌಕರರು ಸ್ವತಃ ತಾವೇ ಉತ್ಸವ ಆಚರಿಸಲು ಮುಂದಾಗಿದ್ದಾರೆ.
ಹೈಲೈಟ್ಸ್:
- ಭದ್ರಾವತಿಯ ವಿಐಎಸ್ಎಲ್ ಶತಮಾನೋತ್ಸವಕ್ಕೆ ಕೇಂದ್ರ ನಿರಾಸಕ್ತಿ.
- ನವೆಂಬರ್ ಮೊದಲ ವಾರ 2 ದಿನದ ಸಂಭ್ರಮಕ್ಕೆ ನಿವೃತ್ತ ನೌಕರರಿಂದ ಸಿದ್ಧತೆ.
- ಕಬ್ಬಿಣ ಮತ್ತು ಉಕ್ಕಿನ 900ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕಾರ್ಖಾನೆ ಈಗ ಸರ್ಕಾರಗಳಿಗೆ ಬೇಡವಾಗಿದೆ.
ಶಿವಮೊಗ್ಗ: ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (ಎಸ್ಎಐಎಲ್) ತನ್ನ ಒಡೆತನದಲ್ಲಿದ್ದು, ಶತಮಾನದ ಇತಿಹಾಸ ಇರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಶತಮಾನೋತ್ಸವ ಆಚರಿಸುವ ಆಸಕ್ತಿಯೆ ಇಲ್ಲ.ಸ್ವಾತಂತ್ರ್ಯಪೂರ್ವದಿಂದಲೂ ದೇಶಕ್ಕೆ ಅಪಾರವಾದ ವಿದೇಶಿ ವಿನಿಮಯ ತಂದು ಕೊಡುತ್ತಿದ್ದ, ಭಾರತೀಯ ವಾಯುಸೇನೆ, ಭೂಸೇನೆ, ನೌಕಾದಳ, ರೈಲ್ವೆ, ಕಾರ್ಖಾನೆಗಳು ಮತ್ತು ವಿದೇಶಗಳ ಬೇಡಿಕೆಯ ಕಬ್ಬಿಣ ಮತ್ತು ಉಕ್ಕಿನ 900ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕಾರ್ಖಾನೆ ಈಗ ಸರ್ಕಾರಗಳಿಗೆ ಬೇಡವಾಗಿದೆ.
ನವೆಂಬರ್ 4 ಮತ್ತು 5 ರಂದು ಅದ್ಧೂರಿ ಉತ್ಸವ
2023ನೇ ಜನವರಿಯಲ್ಲಿ ಶತಮಾನೋತ್ಸವ ಅಚರಿಸುವಂತೆ ಕಾರ್ಮಿಕರು ಮತ್ತು ಭದ್ರಾವತಿ ಜನತೆ ಮಾಡಿದ ಮನವಿಗೂ ಭಾರತೀಯ ಉಕ್ಕು ಪ್ರಾಧಿಕಾರ ಸ್ಪಂದಿಸಿಲ್ಲ. ನಷ್ಟದ ನೆಪವೊಡ್ಡಿ ಸರ್ಕಾರವು ಶತಮಾನೋತ್ಸವ ಆಚರಿಸಲು ನಿರಾಸಕ್ತಿ ತೋರಿಸಿದೆ. ಸರಕಾರ ಮನಸ್ಸು ಬದಲಿಸಬಹುದೆಂದು 9 ತಿಂಗಳವರೆಗೆ ಕಾಯ್ದ ಭದ್ರಾವತಿಯ ನಿವೃತ್ತ ನೌಕರರು ಈಗ ತಾವೇ ‘ವಿಐಎಸ್ಎಲ್ ಶತಮಾನೋತ್ಸವ ಸಮಿತಿ’ ರಚಿಸಿಕೊಂಡು ನವೆಂಬರ್ 4 ಮತ್ತು 5ರಂದು ಅದ್ದೂರಿಯಾಗಿ ಉತ್ಸವ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಆಧುನಿಕ ಮೈಸೂರು ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಒತ್ತಾಸೆ ಮತ್ತು ಭಾರತದ ಕೈಗಾರಿಕಾ ಪಿತಾಮಹ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಪರಿಣಾಮವಾಗಿ ಭದ್ರಾವತಿಯಲ್ಲಿ 1923ನೇ ಜನವರಿಯಲ್ಲಿ ಮೈಸೂರು ಐರನ್ ವರ್ಕ್ಸ್(ಬಳಿಕ ಎಂಐಎಸ್ಎಲ್, 1973ರಲ್ಲಿವಿಐಎಸ್ಎಲ್) ಆರಂಭವಾಗಿತ್ತು. ಹಳೇ ಮೈಸೂರು ಭಾಗದ ಮಂಡ್ಯ, ತುಮಕೂರು, ಮೈಸೂರು ಮತ್ತು ಹಾಸನ ಜಿಲ್ಲೆಗಳ ಬಯಲು ಪ್ರದೇಶದ ಸಾವಿರಾರು ಜನರು ಭದ್ರಾವತಿಗೆ ಆಗಮಿಸಿ ಬದುಕು ಕಂಡುಕೊಂಡಿದ್ದರು. ಶತಮಾನದ ಅವಧಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರ್ಖಾನೆಯು ಲಕ್ಷಕ್ಕೂ ಅಧಿಕ ಕುಟುಂಬಗಳ ಬಾಳನ್ನು ಬಂಗಾರವಾಗಿಸಿದೆ. ಅಂತಹ ಕಾರ್ಖಾನೆ ಈಗ ಸರಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಚಿರಸ್ಥಾಯಿಯಾದ ಮೈಲಿಗಲ್ಲು
ವಿಐಎಸ್ಎಲ್ ಇತಿಹಾಸದ ಮೈಲಿಗಲ್ಲುಗಳಾದ 25, 50 ಮತ್ತು 75ನೇ ವರ್ಷಾಚರಣೆಯನ್ನು ಸಿಲ್ವರ್ ಜುಬಿಲಿ, ಗೋಲ್ಡನ್ ಜುಬಿಲಿ ಮತ್ತು ಪ್ಲಾಟಿನಮ್ ಜುಬಿಲಿ ಹೆಸರಲ್ಲಿ ವಾರಗಟ್ಟಲೆ ಉತ್ಸವವನ್ನು ಆಚರಿಸಲಾಗಿತ್ತು. ಉತ್ಸವದ ನೆನಪನ್ನು ಚಿರಸ್ಥಾಯಿಯಾಗಿಸಲು ಹೊಸ ಹೊಸ ನಿರ್ಮಾಣಗಳನ್ನು ಮಾಡಲಾಗಿತ್ತು. ಸ್ವಾತಂತ್ರ್ಯ ಸಿಕ್ಕಿದ ಐದೇ ತಿಂಗಳಲ್ಲಿಅಂದರೆ 1948ನೇ ಜನವರಿಯಲ್ಲಿ ಬಂದ ರಜತ ಮಹೋತ್ಸವದ ನೆನಪಿಗಾಗಿ ರಾಜ್ಯದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ (ಸಿಲ್ವರ್ ಜುಬಿಲಿ ಸ್ಟೇಡಿಯಂ), ಪಾಲಿಟೆಕ್ನಿಕ್ (ಸಿಲ್ವರ್ ಜುಬಿಲಿ ಪಾಲಿಟೆಕ್ನಿಕ್), ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು (ಸಿಲ್ವರ್ ಜುಬಿಲಿ ಹೈಸ್ಕೂಲ್), ಕಿರಿಯ ತಾಂತ್ರಿಕ ಪ್ರೌಢಶಾಲೆ(ಸಿಲ್ವರ್ ಜುಬಿಲಿ ಜೆಟಿಎಸ್) ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು.
1973ರಲ್ಲಿಸುವರ್ಣ ಮಹೋತ್ಸವದ ನೆನಪಿಗಾಗಿ ಕಾರ್ಮಿಕರಿಗಾಗಿ ನೂರಕ್ಕೂ ಹೆಚ್ಚು ಮನೆಗಳ ಗೋಲ್ಡನ್ ಜುಬಿಲಿ ಬಡಾವಣೆಯನ್ನು ನಿರ್ಮಿಸಲಾಯಿತು. 1998ರಲ್ಲಿಬಂದ ಪ್ಲಾಟಿನಮ್ ಬುಬಿಲಿಯಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿತ್ತು. ವಿಐಎಸ್ಎಲ್ ಇತಿಹಾಸವನ್ನು ಚಿರಸ್ಥಾಯಿಯಾಗಿಸಲು ಹಲವು ಸ್ಮಾರಕಗಳಿವೆ. ಆದರೆ, ಅಂತಹ ಮಹೋನ್ನತ ಕಾರ್ಖಾನೆಯ ಶತಮಾನೋತ್ಸವವನ್ನು ನಿವೃತ್ತ ನೌಕರರೇ ನಡೆಸಬೇಕಾದ ಸ್ಥಿತಿ ಬಂದಿದೆ.
ದಾನಿಗಳ ನೆರವಿನಲ್ಲಿ ದೊಡ್ಡ ಉತ್ಸವ
ಭಾರತೀಯ ಉಕ್ಕು ಪ್ರಾಧಿಕಾರವು ಶತಮಾನೋತ್ಸವಕ್ಕಾಗಿ ಬಿಡಿಗಾಸು ನೀಡದಿರುವ ಹಿನ್ನೆಲೆಯಲ್ಲಿಸಿನಿಮಾ ಮತ್ತು ರಂಗಭೂಮಿಯ ಹಿರಿಯ ಕಲಾವಿದ ಎಸ್.ದೊಡ್ಡಣ್ಣ ಮತ್ತು ಹಿರಿಯ ವಕೀಲ ಎಂ.ವಿ.ರೇವಣ್ಣಸಿದ್ದಯ್ಯ ನೇತೃತ್ವದಲ್ಲಿ ನಿವೃತ್ತ ಮತ್ತು ಹಾಲಿ ನೌಕರರು, ಸಾರ್ವಜನಿಕರು ಮತ್ತು ದಾನಿಗಳ ನೆರವಿನಲ್ಲಿ ದೊಡ್ಡ ಉತ್ಸವಕ್ಕೆ ಸಿದ್ಧತೆ ನಡೆದಿದೆ. ದಾನಿಗಳಿಂದ ದೇಣಿಗೆ ಸಂಗ್ರಹ ಸಹ ಮಾಡಲಾಗುತ್ತಿದೆ. ಆ ಮೂಲಕ ವಿಐಎಸ್ಎಲ್ನ ಶತಮಾನೋತ್ಸವವನ್ನೂ ಚಿರಸ್ಥಾಯಿಯಾಗಿಸಬೇಕೆಂಬುದು ಸಮಿತಿಯ ಉದ್ದೇಶವಾಗಿದೆ.
ಶತಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಅಲ್ಲದೆ ಕೇಂದ್ರ ಮತ್ತು ರಾಜ್ಯದ ಹಲವು ಸಚಿವರನ್ನು ಕರೆಸಲು ತೀರ್ಮಾನಿಸಲಾಗಿದೆ. ಅವರೆಲ್ಲರನ್ನು ಒಟ್ಟು ಸೇರಿಸಿ ವಿಐಎಸ್ಎಲ್ ಪುನರುಜ್ಜೀವನಕ್ಕೆ ಅಂಕುರ ಹಾಕಿಸುವುದು, ಒಪ್ಪದಿದ್ದಲ್ಲಿರಾಜ್ಯ ಸರಕಾರಕ್ಕೆ ವಾಪಸು ಪಡೆದುಕೊಂಡು ರಾಜ್ಯದಿಂದಲೆ ಹಣ ಹೂಡಿಕೆ ಮಾಡಿಸುವ ಒತ್ತಡ ಸಹ ಹಾಕುವ ಚಿಂತನೆ ನಡೆದಿದೆ.
