
ಸರ್ಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಆಧಾರ್ ಕಡ್ಡಾಯವಾಗಿದೆ. ಆದರೆ ಅದನ್ನು ನೋಂದಣಿ ಮಾಡುವ, ತಿದ್ದುಪಡಿ ಮಾಡುವ ಕೇಂದ್ರಗಳು ಮಾತ್ರ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಕಚೇರಿಯಿಂದ ಕಚೇರಿಗೆ ಅಲೆಯುವುದೇ ಆಗಿದೆ.
ಹೈಲೈಟ್ಸ್:
- ಆಧಾರ್ ನೋಂದಣಿ ಕೇಂದ್ರಗಳಿಗೆ ಮೂಲ ಸೌಕರ್ಯಗಳ ಕೊರತೆ
- ಬಯೋಮೆಟ್ರಿಕ್ ಯಂತ್ರದ ಅವ್ಯವಸ್ಥೆಯಿಂದಾಗಿ ಮೂರು ತಿಂಗಳಿಂದ ಯಾವೊಂದು ಕೆಲಸವೂ ಆಗುತ್ತಿಲ್ಲ
- ಇದು ಶರಾವತಿ ಹಿನ್ನೀರು ಪ್ರದೇಶದ ಜನರ ಗೋಳು
ತುಮರಿ: ‘ಆಧಾರ ನೀನೆ ಎಂದು ಈ ಲೋಕ ನಂಬಿದೆ’ ಎಂಬ ಗೀತೆಯಂತೆ ಎಲ್ಲಸರಕಾರಿ ಸೌಲಭ್ಯಗಳ ಪಡೆಯಲು ಆಧಾರ್ ಸಂಖ್ಯೆಯನ್ನು ಸರಕಾರ ಕಡ್ಡಾಯ ಗೊಳಿಸಿದೆ.
ಆದರೆ, ಆಧಾರ್ ಕಾರ್ಡ್ ಒದಗಿಸುವ ಜವಾಬ್ದಾರಿ ಹೊತ್ತ ನೋಂದಣಿ ಕೇಂದ್ರಗಳು ಮಾತ್ರ ಮೂಲಸೌಲಭ್ಯ ಕೊರತೆಯಿಂದ ಬಳಲುತ್ತಿದ್ದು, ಜನರ ನಿತ್ಯ ಅಲೆದಾಟ ತಪ್ಪಿಲ್ಲ. ಶರಾವತಿ ಹಿನ್ನೀರು ಪ್ರದೇಶದ ಕರೂರು ಹೋಬಳಿ ವ್ಯಾಪ್ತಿಯ ಸುಳ್ಳಳ್ಳಿ ಮತ್ತು ತುಮರಿಯಲ್ಲಿಆಧಾರ್ ನೋಂದಣಿ, ತಿದ್ದುಪಡಿ ಕೇಂದ್ರಗಳಿದ್ದು, ಆಡಳಿತ ವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲಸೌಕರ್ಯ ವಂಚಿತವಾಗಿವೆ.
ಸುಳ್ಳಳ್ಳಿ ನಾಡ ಕಚೇರಿಯಲ್ಲಿರುವ ಆಧಾರ್ ನೋಂದಣಿ, ತಿದ್ದುಪಡಿ ಘಟಕ ವು ಕೆಟ್ಟುನಿಂತಿದೆ. ಬಯೋಮೆಟ್ರಿಕ್ ಯಂ ತ್ರದ ಅವ್ಯವಸ್ಥೆಯಿಂದಾಗಿ ಮೂರು ತಿಂಗಳಿಂದ ಯಾವೊಂದು ಕೆಲಸವೂ ಆಗುತ್ತಿಲ್ಲ. ನಡುಗಡ್ಡೆಯ ದ್ವೀಪದ ಜನರು ಆಧಾರ್ ನೋಂದಣಿ ತಿದ್ದುಪಡಿ, ದೂರ ವಾಣಿ ಸಂಖ್ಯೆ ಜೋಡಣೆ, ಇ- ಕೆವೈಸಿ, ಗೃಹಲಕ್ಷಿತ್ರ್ಮ, ಗೃಹಜ್ಯೋತಿ ಯೋಜನೆಗಳ ನೋಂದಣಿಗಾಗಿ ದೂರದ ಸಾಗರ, ಕುಂದಾಪುರ, ಹೊಸನಗರ, ಭಟ್ಕಳಕ್ಕೆ ನಿತ್ಯ ಅಲೆಯುತ್ತಿದ್ದಾರೆ.
ವಯೋವೃದ್ಧರು, ಶಾಲಾ ಮಕ್ಕಳು, ಮಹಿಳೆಯರು, ವಿಶೇಷ ಚೇತನರು ಸೇರಿದಂತೆ ನೂರಾರು ಜನರು ದಿನದಿನವೂ ಅಲೆಯುವಂತಾಗಿದೆ. ನಾಲ್ಕು ಗ್ರಾಮ ಪಂಚಾಯಿತಿಗಳ 22 ಸಾವಿರ ಜನರ ಸೇವೆಗೆ ಒಂದೂ ಆಧಾರ್ ನೋಂದಣಿ ಕೇಂದ್ರವಿಲ್ಲ.
ಹಿನ್ನೀರ ಜನರ ಗೋಳಿಗಿಲ್ಲ ಕೊನೆ
ಡಿಜಿಟಲ್ ಸೇವೆ ಕಡ್ಡಾಯಗೊಳಿಸಿರುವ ಸರಕಾರ ಅಗತ್ಯ ಸೌಲಭ್ಯಗಳನ್ನು ದೊರಕಿಸಿ ಕೊಡಲು ಮುಂದಾಗುತ್ತಿಲ್ಲ. ಸಾರಿಗೆ, ನೆಟ್ವರ್ಕ್, ಪಡಿತರ, ಇ-ಕೆವೈಸಿ ಸೇರಿದಂತೆ ಅಗತ್ಯ ಸೇವೆಗಾಗಿ ಪರದಾಡುವ ಜನರ ಕಷ್ಟ ಕೇಳುವವರಿಲ್ಲ. ಒಂದೊಂದು ಸರಕಾರಿ ಸೌಲಭ್ಯ ಪಡೆಯಲೂ ಜನರು ಹೋರಾಟದ ಹಾದಿ ಹಿಡಿಯಬೇಕಾಗಿದೆ. ಭೂಮಿ ದಾಖಲೆ ಸೇರಿದಂತೆ ಅಗತ್ಯ ಡಿಜಿಟಲ್ ಸೇವೆ ನೀಡಲು ಸರಕಾರ ನಾಡಕಚೇರಿ ತೆರೆದಿದ್ದರೂ ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣಗಳು ಲಭ್ಯವಿಲ್ಲ.
ಗ್ರಾಮ ಒನ್ ಸಿಬ್ಬಂದಿಯ ಯೋಜನೆಗಳ ನೋಂದಣಿ ಹಣವನ್ನೂ ಸರಿಯಾಗಿ ಪಾವತಿಸುತ್ತಿಲ್ಲ. ‘ಆಧಾರ್ ನೋಂದಣಿ ತಿದ್ದುಪಡಿಯ ಬಯೋಮೆಟ್ರಿಕ್ ಯಂತ್ರ ಹಾಳಾಗಿದ್ದು, ತಿಂಗಳುಗಳಿಂದ ಸೇವೆ ಸ್ಥಗಿತಗೊಂಡಿದೆ. ಸರಿಪಡಿಸಲು ತಾಲೂಕು ಆಡಳಿತಕ್ಕೆ ಕಳಿಸಲಾಗಿದೆ. ಜನರು ಸೇವೆಗಾಗಿ ಕೇಳಿಕೊಂಡು ಬಂದು ಹೋಗುತ್ತಿದ್ದಾರೆ. ಅಗತ್ಯ ಪರಿಕರಗಳು ಬಂದ ನಂತರ ಪ್ರಾರಂಭಿಸಲಾಗುತ್ತದೆ’ ಎನ್ನುತ್ತಾರೆ ಸುಳ್ಳಳ್ಳಿ ನಾಡಕಚೇರಿ ಸಿಬ್ಬಂದಿ.