
ಸಾಗರ: ‘ಯಾವುದೇ ಕಾರಣಕ್ಕೂ ಸಾಗರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೊಡಬಾರದು. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಮಾತು ಮೀರಿ ಟಿಕೆಟ್ ನೀಡಿದರೆ ಅವರನ್ನು ಸೋಲಿಸಲು ಪ್ರಯತ್ನ ನಡೆಸುತ್ತೇವೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.
‘ಹಾಲಪ್ಪ ಅವರಿಗೆ ಟಿಕೆಟ್ ಕೊಡಬಾರದು ಎಂದು ಬಿಜೆಪಿ ಜಿಲ್ಲಾ ಮತ್ತು ರಾಜ್ಯ ವರಿಷ್ಠರಿಗೆ ಮನವಿ ಮಾಡಲಾಗಿದೆ. ಹಾಲಪ್ಪ ಹೊರತುಪಡಿಸಿ ಬೇರೆ ಯಾರಿಗೆ ಪಕ್ಷ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಹಲವು ವರ್ಷಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷವನ್ನು ಕಟ್ಟಿದ ಮೂಲ ಕಾರ್ಯಕರ್ತರನ್ನು ಶಾಸಕ ಹಾಲಪ್ಪ ಮತ್ತವರ ಗುಂಪು ಕಡೆಗಣಿಸಿದೆ. ಪಕ್ಷದಲ್ಲಿ ಕೆಲಸ ಮಾಡದವರಿಗೆ ಬೇರೆ ಬೇರೆ ಸ್ಥಾನಮಾನ ನೀಡಿದ್ದಾರೆ. ಅರೆಬರೆ ಕೆಲಸ ಮಾಡಿ ಅಭಿವೃದ್ಧಿಯಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಎಲ್.ಬಿ. ಕಾಲೇಜಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಹಾಲಪ್ಪ ಹರತಾಳು, ಅಲ್ಲಿನ ಆಡಳಿತ ಮಂಡಳಿಗೆ ತಮ್ಮ ಆಪ್ತ ವಿನಾಯಕ ರಾವ್ ಅವರನ್ನು ಸದಸ್ಯರನ್ನಾಗಿ ಮಾಡಿದ್ದು ಏಕೆ? ಎಂಎಸ್ಐಎಲ್ನಲ್ಲಿ ವಿನಾಯಕ ರಾವ್ ಅವರನ್ನು ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಂಡಿದ್ದಾರೆ’ ಎಂದು ದೂರಿದರು.
‘ಪ್ರಾಮಾಣಿಕ ಹಿರಿಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿರುವ ಹಾಲಪ್ಪ ಅವರ ಧೋರಣೆ ಖಂಡನೀಯ. ಅವರ ವರ್ತನೆಯನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಪರ್ಯಾಯ ಅಭ್ಯರ್ಥಿಗೆ ಟಿಕೆಟ್ ಕೊಡಲು ಮನವಿ ಮಾಡಲಾಗಿದೆ’ ಎಂದು ಹಿರಿಯ ಮುಖಂಡ ಜಗದೀಶ್ ಒಡೆಯರ್ ಹೇಳಿದರು.
ಪ್ರಮುಖರಾದ ಪ್ರಕಾಶ್ ಕುಂಠೆ, ಕಸ್ತೂರಿ ಸಾಗರ್, ಶಿವು ತ್ಯಾಗರ್ತಿ, ಗಿರೀಶ್, ನಾಗರಾಜ್ ಮೊಗವೀರ ಇದ್ದರು.
